ಜಿ. ವಿ. ಅತ್ರಿ (ಮೇ ೨೧, ೧೯೬೪ - ಏಪ್ರಿಲ್ ೩೦, ೨೦೦೦) ಸುಗಮ ಸಂಗೀತ ಗಾಯಕರಾಗಿ ಕನ್ನಡ ನಾಡಿನಲ್ಲಿ ಪ್ರಸಿದ್ಧರಾಗಿದ್ದಾರೆ. == ಸುಗಮ ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧಿ == ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿ ಪ್ರಖ್ಯಾತಿಯಲ್ಲಿದ್ದಾಗಲೇ ನದೀ ಪ್ರವಾಹದಲ್ಲಿ ಮತ್ತೊಬ್ಬರ ಪ್ರಾಣ ಉಳಿಸ ಹೋಗಿ ತಮ್ಮ ಪ್ರಾಣ ಕಳೆದುಕೊಂಡ ಜಿ.ವಿ. ಅತ್ರಿ ಅವರು ಜನಿಸಿದ್ದು ಮೇ ೨೧, ೧೯೬೪ರಲ್ಲಿ. ಸಂಗೀತ ಕಾರ್ಯಕ್ರಮಗಳು, ಚಲನಚಿತ್ರ, ದೂರದರ್ಶನ, ಧ್ವನಿಸುರುಳಿಗಳು ಹೀಗೆ ಎಲ್ಲೆಡೆಗಳಲ್ಲಿಯೂ ತಮ್ಮ ಛಾಪನ್ನು ಮೂಡಿಸಿ ಮಂಜುಳಾ ಗುರುರಾಜ್ ನಿರ್ಮಿಸಿದ ಸಾಧನಾ ಸಂಗೀತ ಶಾಲೆಯ ಪ್ರಾರಂಭಿಕ ನೇತೃತ್ವ ವಹಿಸಿ, ನಂತರದಲ್ಲಿ ತಮ್ಮದೇ ಆದ 'ಸಂಗೀತ ಗಂಗಾ' ಸಂಸ್ಥೆಯನ್ನೂ ಸಹಾ ಹುಟ್ಟು ಹಾಕಿ ಅನೇಕ ಯುವ ಪ್ರತಿಭೆಗಳನ್ನು ತಯಾರು ಮಾಡಿ ಕನ್ನಡದಲ್ಲಿ ಸುಗಮ ಸಂಗೀತ ಪ್ರತಿಭೆಗಳು ನಿರಂತರವಾಗಿ ಮುಂದುವರೆಯುವಲ್ಲಿ ಅತ್ರಿಯವರು ನೀಡಿದ ಕೊಡುಗೆ ಮಹತ್ತರವಾದುದು. ಪಿ. ಬಿ. ಶ್ರೀನಿವಾಸರ ಧ್ವನಿಯನ್ನು ಅತ್ಯಂತ ಸಮೀಪಕ್ಕೆ ಅವರ ಧ್ವನಿ ಹೋಲುತ್ತಿದ್ದುದು ಎಲ್ಲೆಡೆ ಜನಮನ್ನಣೆಗಳಿಸಿತ್ತು. == ಸಣ್ಣ ವಯಸ್ಸಿನಲ್ಲೇ ಕಳೆದುಹೋದ ಪ್ರತಿಭೆ == ಅತೀ ಚಿಕ್ಕವಯಸ್ಸಿನಲ್ಲೇ ಮಹತ್ತರವಾದ ಸಾಧನೆ ಮಾಡಿ, ಕನ್ನಡಕ್ಕೆ ಒಬ್ಬ ಮಹತ್ವದ ಗಾಯಕ ಇದ್ದಾನೆ ಎಂದು ಜನಸ್ತೋಮ ಸಂಭ್ರಮಿಸುವಷ್ಟರಲ್ಲಿಯೇ ಆತ (೩೦.೦೪.೨೦೦೦ದ ದಿನದಂದು) ಈ ಲೋಕದಿಂದ ಅಸ್ತಮಿಸಿದ್ದು ವಿಧಿಯ ವಿಪರ್ಯಾಸ.